New Movie : ನಾ ನಿನ್ನ ಬಿಡಲಾರೆ 2.0 ಗೆ ಹೇಮಂತ್‌ ಹೆಗಡೆ ತಯಾರಿ

ನಾ ನಿನ್ನ ಬಿಡಲಾರೆ ಸಿನಿಮಾ ಗೊತ್ತಿರಲೇಬೇಕು. ಹೊಸ ತಲೆಮಾರಿನವರೂ ಹಳೆ ತಲೆಮಾರಿನವರಿಂದ ಕೇಳಿ ತಿಳಿದುಕೊಂಡು ಈ ಸಿನಿಮಾ ನೋಡಿರುತ್ತಾರೆ. ಹೊಸ ತಲೆಮಾರಿನವರೆಂದರೆ ಈ ಭೂತ, ಪ್ರೇತ, ಭಯಾನಕ, ಹಾರರ್‌ ಸಿನಿಮಾಗಳೆಂದರೆ ಇಷ್ಟವಲ್ಲವೇ? ಒಂದು ಮಾತಿಗೆ ಒಳ್ಳೆಯದೇ.

ಈ ಲಾಂಗು, ಮಚ್ಚು, ರಕ್ತಪಾತದಂಥ ಭೀಭತ್ಸ ಸಿನಿಮಾಗಳನ್ನು ನೋಡುವುದಕ್ಕಿಂತ ಈ ಹಾರರ್‌ ಸ್ವಲ್ಪ ಪರವಾಗಿಲ್ಲ ಎಂದರೆ ತಪ್ಪಲ್ಲ. 1979 ರಲ್ಲಿ ಬಿಡುಗಡೆಯಾದ ಸಿನಿಮಾವನ್ನು ನಿರ್ದೇಶಿಸಿದವರು ವಿಜಯ್.‌ ನಿರ್ಮಾಪಕರು ಸಿ. ಜಯರಾಂ. ಅನಂತನಾಗ್‌, ಲಕ್ಷ್ಮಿ, ಕೆ. ವಿಜಯ, ಅಶ್ವಥ್‌ ಮೊದಲಾದವರು ಪಾತ್ರವರ್ಗದಲ್ಲಿದ್ದರು.

ಸಾರ್ವಕಾಲಿಕ ಹಾರರ್‌ ಚಿತ್ರಗಳಲ್ಲಿ ಇದು ಒಂದು ಪರಿಗಣಿತವಾಗಿದೆ. ವಿಜಯ್‌ (ಅನಂತನಾಗ್‌ ) ನನ್ನು ಹೊಕ್ಕಿರುವ ಕಾಮಿನಿ ದೆವ್ವವನ್ನು ಬಿಡಿಸಿ ತನ್ನ ಗಂಡನನ್ನು ಗಾಯತ್ರಿ (ಲಕ್ಷ್ಮಿ) ಉಳಿಸಿಕೊಳ್ಳುವಂಥ ಚಿತ್ರ ಅನಂತನಾಗ್‌ ನಟಿಸಿದ ಪರಿ ಅತ್ಯಂತ ಜನಪ್ರಿಯತೆ ತಂದುಕೊಟ್ಟಿತು.

ಮಂತ್ರಾಲಯದ ಮಹಾತ್ಮೆಯನ್ನೂ ತೆರೆಯ ಮೇಲೆ ತಂದಿತ್ತು. ವಿಶೇಷವೆಂದರೆ ಇದು ಅನಂತನಾಗ್‌ ಮತ್ತು ಲಕ್ಷ್ಮಿಯ ಮೊದಲ ಜೋಡಿ ಚಿತ್ರ. ಆ ಬಳಿಕ ಈ ಜೋಡಿ ಹಲವು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯವಾಯಿತು.

ನಾಲ್ಕು ಹಾಡುಗಳಿದ್ದು ಎಸ್.‌ ಜಾನಕಿ, ಪಿ. ಸುಶೀಲ, ಎಸ್.‌ ಪಿ. ಬಾಲಸುಬ್ರಹ್ಮಣ್ಯ ಹಾಡಿದ್ದರು. ಒಂದಕ್ಕಿಂತ ಒಂದು ಹಾಡು ಚೆನ್ನಾಗಿದ್ದವು.

ಬಿಡೆನು ನಿನ್ನ ಪಾದ, ಎಂದೆಂದಿಗೂ ನಾ ನಿನ್ನ, ಹೊಸ ಬಾಳಿಗೆ ನೀ ಜತೆಯಾದೆ, ನಾನೂ ನೀನು ಒಂದಾದ- ಇವು ಗೀತೆಗಳು. ಗೀತ ಸಾಹಿತ್ಯವನ್ನು ಚಿ. ಉದಯಶಂಕರ್‌ ಒದಗಿಸಿದ್ದರೆ, ರಾಜನ್‌ ನಾಗೇಂದ್ರ ಜೋಡಿ ಸಂಗೀತ ನಿರ್ದೇಶನ ಮಾಡಿತ್ತು.

ಎಲ್ಲರ ಒಟ್ಟಂದದಿಂದ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಈ ಚಿತ್ರ ಹಿಂದಿಯಲ್ಲೂ ಮಂಗಳ ಸೂತ್ರ ಶೀರ್ಷಿಕೆಯಲ್ಲಿ 1981 ರಲ್ಲಿ ಬಿಡುಗಡೆಯಾಗಿತ್ತು. ಅಲ್ಲಿಯೂ ವಿಜಯ ಪಾತ್ರವನ್ನು ಅನಂತನಾಗ್‌ ನಿರ್ವಹಿಸಿದ್ದರೆ, ಗಾಯತ್ರಿ ಪಾತ್ರದಲ್ಲಿ ರೇಖಾ ಅಭಿನಯಿಸಿದ್ದರು.

Rakshith Shetty : ಊರ ಹಾದಿಯ ಹುಡುಗನ ಹಂಬಲದ ಪಯಣ

ಹೊಸ ವರ್ಷನ್‌ ನಾ ನಿನ್ನ ಬಿಡಲಾರೆ

ಈಗ ಈ ಸಿನಿಮಾದ ಶೀರ್ಷಿಕೆ ಯಾಕೆ ಸುದ್ದಿಯಲ್ಲಿದೆ ಎಂದರೆ, ಹೇಮಂತ್‌ ಹೆಗಡೆ ಮತ್ತೊಮ್ಮೆ ನಾ ನಿನ್ನ ಬಿಡಲಾರೆ ಎನ್ನುತ್ತಿದ್ದಾರೆ. ಇತ್ತೀಚೆಗಷ್ಟೇ ಹೇಮಂತ್‌ ಹೆಗಡೆಯವರ ಹೊಸ ಚಿತ್ರ ನಾ ನಿನ್ನ ಬಿಡಲಾರೆ ಮುಹೂರ್ತ ನೆರವೇರಿತು. ಹೇಮಂತ್‌ ಅವರೇ ಹೇಳುವಂತೆ ಇದೊಂದು ಹಾರರ್‌ ಜಾನರ್‌ ನ ಚಿತ್ರ.

ಕನ್ನಡದ್ದೇ ಗುಣ ಸ್ವಭಾವವಿರುವ ಹಾರರ್‌ ಚಿತ್ರ ಬಂದು ಬಹಳ ಸಮಯವಾಗಿದೆ. ಇದು ಸಕಾಲವೆಂದು ಹೇಮಂತ್‌ ಈ ಶೀರ್ಷಿಕೆ ಮತ್ತು ಚಿತ್ರದ ಮೂಲಕ ಎಲ್ಲರನ್ನೂ ಹಿಡಿದುಕೊಳ್ಳಲು (ವ್ಯಾಪಿಸಿಕೊಳ್ಳಲು) ಹೊರಟಿದ್ದಾರೆ.

FireFly: ಮೂರು ಮಿಣುಕು ಹುಳಗಳ ಕಥೆ ಬೆಳಕಿನ ಹಬ್ಬಕ್ಕೆ ಫೈರ್‌ ಫ್ಲೈ

ಈ ಚಿತ್ರದ ಕಥೆಯೆ ಬೇರೆ. ಸದ್ಯದ ಲೆಕ್ಕಾಚಾರದಂತೆ ಜುಲೈ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಹೊಸನಗರದ ಬಳಿ ಚಿತ್ರೀಕರಣಕ್ಕೊಂದು ಮನೆ ಹುಡುಕಿದ್ದಾರಂತೆ. ಅದಕ್ಕೂ ನೂರೈವತ್ತು ವರ್ಷ ವಯಸ್ಸಾಗಿದೆಯಂತೆ. ಒಂದು ತಿಂಗಳಲ್ಲಿ ಚಿತ್ರೀಕರಣ ಮುಗಿಸುವ ಯೋಜನೆ ಚಿತ್ರತಂಡದ್ದು.

ಹೇಮಂತ್‌, ಅಪೂರ್ವ, ಭಾವನಾ ರಾಮಣ್ಣ, ಕಿಶೋರ್‌, ಮಕರಂದ್‌ ದೇಶಪಾಂಡೆ, ಶಂಕರ್‌ ಅಶ್ವತ್ಥ್‌, ಶರತ್‌ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ರೇವಣ್ಣ ಸಿದ್ಧಯ್ಯ ಮತ್ತಿತರರು ತಾರಾಗಣದಲ್ಲಿದ್ದಾರಂತೆ.

ಹಾಗೆಯೇ ನಟ ನಾಜರ್‌ ಜತೆಯೂ ಮಾತುಕತೆ ನಡೆದಿದೆ. ಅವರು ಈ ಚಿತ್ರದಲ್ಲಿರುತ್ತಾರೋ ಇಲ್ಲವೋ ಕಾದು ನೋಡಬೇಕು. ವಾಸುಕಿ ವೈಭವ್‌ ಅವರದ್ದು ಸಂಗೀತ.

ಅನ್ವಿತಾ ಆರ್ಟ್ಸ್ ಲಾಂಛನದಲ್ಲಿ ರೂಪುಗೊಳ್ಳುತ್ತಿರುವ ಚಿತ್ರವನ್ನು ಶಶಿಕಿರಣ್ ರಂಗನಾಥ್, ಕಿರಣ್ ನಾಗರಾಜ್ ಹಾಗೂ ಬಾಲಕೃಷ್ಣ ಪೆರುಂಬಲ ನಿರ್ಮಿಸಿದ್ದಾರೆ. ಅಂದ ಹಾಗೆ ಭಾವನಾ ರಾಮಣ್ಣ ದೆವ್ವದ ಪಾತ್ರಧಾರಿಯಂತೆ.

Sunayana: ಮೌನರಾಗ- ಹೊಸ ನೀರು ಹಳೆಯ ಕೊಳೆಯನ್ನಷ್ಟೇ ಕೊಚ್ಚಿಕೊಂಡು ಹೋಗಲಿ

ಜೊತೆಗೆ ಈ ಚಿತ್ರದ ಅಡಿ ಟಿಪ್ಪಣಿ ಘೋಸ್ಟ್‌ 2.0 ಅಂತಾ ಇದೆಯಂತೆ. ದೆವ್ವದ ಹೊಸ ವರ್ಷನ್‌ ಹೊಸ ತಲೆಮಾರನ್ನು ರಂಜಿಸಿ, ಹಳೆಯ ತಲೆಮಾರನ್ನೂ ಖುಷಿ ಪಡಿಸುತ್ತದೋ, ದೆವ್ವ ರಂಜಿಸುತ್ತದೋ, ಇಡೀ ಸಿನಿಮಾ ರಂಜಿಸುತ್ತದೋ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

spot_img

More like this

Kannada Classics: ಇಂದಿಗೂ ಕ್ಲಾಸಿಕ್‌ ಬೂತಯ್ಯನ ಮಗ ಅಯ್ಯು

ಕನ್ನಡದ ಕ್ಲಾಸಿಕ್‌ ಚಲನಚಿತ್ರಗಳು ಹಲವು. ಈ ಕ್ಲಾಸಿಕ್‌ ಗಳೆಂದು ಗುರುತಿಸುವಾಗ ಅದರಲ್ಲಿ ವಾಣಿಜ್ಯಾತ್ಮಕ, ಕಲಾತ್ಮಕ, ಬ್ರಿಡ್ಜ್‌ ಸಿನಿಮಾ ಎಂದೆಲ್ಲ ಪ್ರತ್ಯೇಕಿಸುವುದಿಲ್ಲ. ಯಾಕೆಂದರೆ ವಿಭಾಗಗಳ...

Raj B Shetty : ಮೊಟ್ಟೆ ಒಡೆದು ಮರಿ ; ರಾಜ್‌ರದ್ದು...

ಮೊಟ್ಟೆ ಬೆಳೆದು ಒಡೆದು ಹೊರಬಂದರೆ ಮರಿ. ಇದೂ ರೂಪಾಂತರವೇ. ಈಗ ಇಂಥದೊಂದು ಮೊಟ್ಟೆ ಕಥೆ ಹೇಳಿದ ರಾಜ್‌ ಬಿ ಶೆಟ್ಟಿಯವರು ರೂಪಾಂತರಗೊಳ್ಳುತ್ತಿದ್ದಾರೆ. ತಮ್ಮ...

Movie Jigar: ಮತ್ತೊಂದು ಹೊಸ ಚಿತ್ರ ಜಿಗರ್‌ ಜುಲೈ 5 ಕ್ಕೆ...

ಮತ್ತೊಂದು ಹೊಸ ಚಿತ್ರ ಜುಲೈ 5 ರಂದು ಬಿಡುಗಡೆಯಾಗುತ್ತಿದೆ. ಅದರ ಹೆಸರು ಜಿಗರ್.‌ ಪ್ರವೀಣ್‌ ತೇಜ್‌ ಇದರ  ನಾಯಕ ನಟ. ನಾಯಕಿ ವಿಜಯಶ್ರೀ....