Friday, March 21, 2025
spot_img
More

    Latest Posts

    ಕನ್ನಡ ಚಿತ್ರರಂಗದ ಸ್ಥಿತಿಗತಿ ಚೆನ್ನಾಗಿಯೇ ಇದೆಯಲ್ಲ :ಶೇಷಾದ್ರಿ

    ಬೆಂಗಳೂರು : ಕನ್ನಡ ಚಿತ್ರರಂಗದ ಸ್ಥಿತಿ ಮತ್ತು ಗತಿ ಹೇಗಿದೆ?

    ಇಲ್ಲಿ ಗತಿ ಎಂಬುದು ಋಣಾತ್ಮಕ ನೆಲೆಯಲ್ಲಿ ಬಳಸುತ್ತಿಲ್ಲ. ಅದರ ಬದಲು ಕಲಾತ್ಮಕ ಜಗತ್ತಿನಲ್ಲಿ ಬಳಸಲಾಗುವ ವೇಗ (ಪೇಸ್)‌ ದ ಕುರಿತು ಪ್ರಸ್ತಾಪಿಸಲಾಗುತ್ತಿದೆ.

    ಸದ್ಯದ ಲೆಕ್ಕಾಚಾರದಲ್ಲಿ ಹೇಳುವುದಾದರೆ ಗತಿ ಚೆನ್ನಾಗಿದೆ, ಸ್ಥಿತಿಯೂ ಚೆನ್ನಾಗಿದೆ.

    ಈ ಮಾತನ್ನು ಹೇಳಿದವರು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪಿ. ಶೇಷಾದ್ರಿಯವರು.

    ಸಂದರ್ಭವನ್ನು ಉಲ್ಲೇಖಿಸುವುದು ಸೂಕ್ತ ಎನಿಸುತ್ತದೆ. ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘವು ಇತ್ತೀಚೆಗೆ ಶ್ರೀಗಂಧದ ನಗರಿಯಾದ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣ.

    ಪಿ. ಶೇಷಾದ್ರಿಯವರು ಹಂಚಿಕೊಂಡ ಅಭಿಪ್ರಾಯಗಳ ಸಂಗ್ರಹ ಹಾಗೂ ಸ್ಪಷ್ಟರೂಪ ಇಲ್ಲಿದೆ.

    ನಮ್ಮ ಚಿತ್ರರಂಗ ಕಂಡು ನಾವು ಚೆನ್ನಾಗಿಲ್ಲ, ಎಲ್ಲವೂ ಸರಿಯಿಲ್ಲ ಎಂದೆಲ್ಲ ಅಂದುಕೊಳ್ಳುತ್ತೇವೆ. ಆದರೆ ಕನ್ನಡ ಚಿತ್ರರಂಗದ 90 ವರ್ಷಗಳ ಇತಿಹಾಸವನ್ನು ಒಮ್ಮೆ ಅವಲೋಕಿಸುವುದಾದರೆ ಹಿಂದೆಲ್ಲಾ ವರ್ಷಕ್ಕೆ 6-8 ಸಿನಿಮಾಗಳು ನಿರ್ಮಾಣವಾಗುತ್ತಿದ್ದ ಕಾಲವಿತ್ತು. ಬಳಿಕ ನೂರಾಯಿತು. ಇವತ್ತು ಸುಮಾರು 250 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಲಾಗುತ್ತಿದೆ. ಈ ಸಂಖ್ಯೆಯೆ ನಮ್ಮ ಹಲವು ಗೊಂದಲಗಳನ್ನು ನಿವಾರಿಸಬಲ್ಲದು. ಸಂಖ್ಯೆವಾರು ಚೆನ್ನಾಗಿದೆ.

    p sheshadri

    ಹಾಗಾದರೂ ಚಿತ್ರರಂಗ ಸ್ಥಿತಿ ಬಗ್ಗೆ ಏಕೆ ಮಾತನಾಡುತ್ತೇವೆ? ಈ ಎಲ್ಲ ಚಿತ್ರಗಳೂ ಯಶಸ್ಸು ಕಂಡಿವೆಯೇ? ಎಂಬ ಪ್ರಶ್ನೆಗೆ ಎಲ್ಲವೂ ಆಲ್ಲ. ಯಾವುದೇ ಉದ್ಯಮದಲ್ಲಿ ಯಶಸ್ಸಿನ ಪ್ರಮಾಣ ಅಥವಾ ಇರುವುದು ಶೇ 5 ರಿಂದ 6 ರಷ್ಟು. ಆ ಸೂತ್ರವನ್ನೇ ಕನ್ನಡ ಚಿತ್ರರಂಗಕ್ಕೂ ಅನ್ವಯಿಸಿದರೆ ಅಷ್ಟು ಸಿನಿಮಾಗಳು ದೊಡ್ಡ ಗೆಲುವನ್ನುಕಂಡಿವೆ. ಆದರೆ ಚಿತ್ರರಂಗದ ಸ್ಥಿತಿ ಚೆನ್ನಾಗಿಲ್ಲ ಎಂಬ ಮಾತನ್ನು ನಾವು ನಿಲ್ಲಿಸಿಲ್ಲ.

    ಈ ಕೊರಗು ಅಥವಾ ಅಭಿಪ್ರಾಯ ಕನ್ನಡ ಚಿತ್ರರಂಗಕ್ಕಷ್ಟೇ ಸೀಮಿತವಾಗಿಲ್ಲ. ಇತ್ತೀಚೆಗಷ್ಟೇ ಮಲಯಾಳಂ ಚಿತ್ರರಂಗದ ಬೆಳವಣಿಗೆಗಳನ್ನು ಅರಿಯುವ ಅವಕಾಶ ಸಿಕ್ಕಿತ್ತು. ಸುಮಾರು 40 ಕ್ಕೂ ಹೆಚ್ಚು ಸಿನಿಮಾಗಳನ್ನು ನೋಡಿದೆ. ಅ ಸಂದರ್ಭದಲ್ಲಿ ಕೆಲವರು ಮಲಯಾಳಿ ಸಿನಿಮಾ ನಿರ್ದೇಶಕರು ಹಾಗೂ ನಿರ್ಮಾಪಕರ ಜತೆ ಹೇಗಿದೆ ನಿಮ್ಮ ಚಿತ್ರರಂಗ ಎಂದು ಕೇಳಿದಾಗ ಅವರು ಹೇಳಿದ ಅಭಿಪ್ರಾಯ ನಮ್ಮ ಚಿತ್ರರಂಗದಲ್ಲಿನ ಅಭಿಪ್ರಾಯ ಎರಡೂ ಒಂದೇ ಆಗಿತ್ತು.

    ಮಹಾರಾಷ್ಟ್ರದ ಮರಾಠಿ ಹಾಗೂ ಪಶ್ಚಿಮ ಬಂಗಾಳದ ಬಂಗಾಳಿ ಚಿತ್ರರಂಗದ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ಸಿಕ್ಕಿತ್ತು. ಆಗ ಅಲ್ಲಿಯೂ ಇದೇ ಸಂಗತಿಯನ್ನು ಹಿಡಿದುಕೊಂಡು ಚರ್ಚೆ ಮಾಡಿದ್ದೆ. ಅಲ್ಲಿನ ಅಭಿಪ್ರಾಯ ಭಿನ್ನವಾಗಿರಲಿಲ್ಲ. ಇನ್ನೂ ಮಹತ್ವದ ಸಂಗತಿಯೆಂದರೆ ಮಹಾರಾಷ್ಟ್ರದ ಮರಾಠಿ ಚಿತ್ರರಂಗದವರು, “ನಮ್ಮಲ್ಲಿ ಚಿತ್ರರಂಗ ಉಳಿಸಿಕೊಳ್ಳುವುದೇ ಕಷ್ಟ ಎನ್ನುವಂತಾಗಿದೆ. ನಮ್ಮ ತಲೆಯ ಮೇಲೆ ಬಾಲಿವುಡ್‌ ತೂಗುಗತ್ತಿ ತೂಗುತ್ತಲೇ ಇರುತ್ತದೆ ಎಂದರು. ಅದಕ್ಕೆ ನಾನು ಹೇಳಿದೆ. ನಿಮ್ಮದೇ ಪರವಾಗಿಲ್ಲ, ಬರೀ ಬಾಲಿವುಡ್.‌ ನಮ್ಮಲ್ಲಿ (ಕನ್ನಡ ಚಿತ್ರರಂಗದ ಬೆಂಗಳೂರಿನಲ್ಲಿ) ಮೂರ್ನಾಲ್ಕು ವುಡ್‌ ಗಳೊಂದಿಗೆ (ತಮಿಳು, ತೆಲುಗು ಇತ್ಯಾದಿ) ಸ್ಪರ್ಧಿಸಬೇಕು.

    ಈ ಪರಿಸ್ಥಿತಿ ಬರೀ ಭಾರತಕ್ಕೆ ಸೀಮಿತವಾಗಿಲ್ಲ. ಈಜಿಪ್ಟ್‌ ಮತ್ತಿತರ ರಾಷ್ಟ್ರಗಳಲ್ಲಿ ಹೋದಾಗಲೂ ಇದೇ ಸಮಸ್ಯೆಗಳ ಕುರಿತು ಕೇಳಿದ್ದೇನೆ. ಹಾಗಾಗಿ ಚಿತ್ರರಂಗವೂ ಸೇರಿದಂತೆ ಯಾವುದೇ ಉದ್ಯಮಕ್ಕೆ ಸಮಸ್ಯೆಯಾಗಲೀ, ಸಂಕಷ್ಟವಾಗಲೀ, ಸವಾಲುಗಳಾಗಲೀ ಹೊಸದಲ್ಲ. ಅದು ಇದ್ದೇ ಇರುತ್ತವೆ. ನಾವು ಅವುಗಳನ್ನು ಎದುರಿಸುತ್ತಾ ಮುಂದೆ ಸಾಗಬೇಕು.

    ನನ್ನದೇ ಸಿನಿಮಾಗಳ ಬಗ್ಗೆ ಹೇಳುವುದಾದರೆ, ನನ್ನ ಯಶಸ್ಸಿನ ಪ್ರಮಾಣ ಶೇ. 98 ರಷ್ಟು. ನಾನು ಮಾಡಿದ ಸಿನಿಮಾಗಳಲ್ಲಿ ಒಂದೆರಡು ಸಣ್ಣ ಸೋಲು ಕಂಡರೂ ಉಳಿದೆಲ್ಲವೂ ಯಶಸ್ವಿಯಾಗಿವೆ.

    ಈ ಒಟ್ಟೂ ಮಾತಿನ ಅರ್ಥ ಹೀಗೆ ಎಂದುಕೊಳ್ಳಬಹುದು. ಉದ್ಯಮ ಎಂದರೆ ಸವಾಲು ಇದ್ದದ್ದೇ. ಅದನ್ನು ಸಮಸ್ಯೆಯಾಗಿ ಸ್ವೀಕರಿಸುತ್ತೇವೆಯೋ, ಸಂಕಟವೆಂದು ಅರ್ಥ ಮಾಡಿಕೊಳ್ಳುತ್ತೇವೆಯೋ, ಸವಾಲುಗಳೆಂದು ಎದುರಿಸುತ್ತೇವೆಯೋ ಅದು ಅವರವರಿಗೆ ಬಿಟ್ಟದ್ದು.

     

     

    Latest Posts

    spot_imgspot_img

    Don't Miss